ಕಲಿಯುಗ : ವೈದಿಕವಾಙ್ಮಯದಲ್ಲಿ ಹೇಳಲ್ಪಟ್ಟ ನಾಲ್ಕು ಯುಗಗಳಲ್ಲಿ ಕಡೆಯದು. ಉಳಿದವು ಕೃತ, ತ್ರೇತ, ದ್ವಾಪರ. ಇದರ ಅವಧಿ ೪,೩೨,೦೦೦ ವರ್ಷಗಳು. ಪ್ರಕೃತ ಇದರಲ್ಲಿ ೫೦೬೬ ವರ್ಷಗಳು ಪುರ್ತಿಯಾಗಿ ೫೦೬೭ನೆಯ (ವಿಶ್ವಾವಸು) ಸಂವತ್ಸರ ನಡೆಯುತ್ತಿದೆ. ಈ ಯುಗದಲ್ಲಿ ಧರ್ಮ ಒಂದೇ ಕಾಲಿನಲ್ಲಿ ನಿಂತು ಕುಂಟುತ್ತಲೂ ಅಧರ್ಮ ನಾಲ್ಕು ಕಾಲುಗಳಿಂದ ನಲಿದಾಡುತ್ತಲೂ ಇರುವುದು. ಎಂದರೆ ಜನರಲ್ಲಿ ಧಾರ್ಮಿಕ ಪ್ರವೃತ್ತಿ, ಭಾವನೆಗಳು ಮಾಯವಾಗಿ ಅಧರ್ಮರುಚಿಯೂ ಸ್ವಾರ್ಥಭಾವನೆಯೂ ಹೆಚ್ಚುವುವು. ಇದರ ಫಲವಾಗಿ ಅವರಿಗೆ ಸುಖಸಂತೋಷಗಳು ದೊರೆಯದೆ ವ್ಯಾಧಿ, ದುರ್ಭಿಕ್ಷ, ಹಸಿವು, ಬಾಯಾರಿಕೆ, ಮಿತಿಯಿಲ್ಲದ ಪ್ರಜಾವೃದ್ಧಿ ಮುಂತಾದ ದುಃಖಗಳೇ ಹೆಚ್ಚುತ್ತ ಬರುವುವು. ಕಲಿ ಮಹಿಮೆ ಹೆಚ್ಚಿದಂತೆಲ್ಲ ಧರ್ಮ, ಸತ್ಯ, ಕ್ಷಮೆ, ದಯೆ, ಶೌಚ, ಸದಾಚಾರ ವ್ಯವಹಾರಗಳು, ಆಯುಃಪ್ರಮಾಣ, ದೈಹಿಕ ಶಕ್ತಿ, ಸ್ಮೃತಿಶಕ್ತಿ_ಇವು ನಶಿಸುವುವು. ಧರ್ಮ ಮತ್ತು ನ್ಯಾಯವ್ಯವಸ್ಯೆಯಲ್ಲಿ ಧನಬಲವೇ ಪ್ರಧಾನವಾಗುವುದು. ಹೀಗಿದ್ದರೂ ಇತರ ಯುಗಗಳಂತೆ ಕಠಿಣವಾದ ತಪಶ್ಶಕ್ತಿಯೇ ಮುಂತಾದುವುಗಳನ್ನನುಷ್ಠಿಸದೆ, ಭಗವನ್ನಾಮಸ್ಮರಣ ಮಾತ್ರದಿಂದಲೇ ಕಲಿಯುಗದ ಜನ ಮೋಕ್ಷಾದಿ ಶ್ರೇಷ್ಠ ಫಲಗಳನ್ನು ಹೊಂದಬಲ್ಲರು. ದಾನವೇ ಈ ಯುಗದ ಪ್ರಧಾನ ಧರ್ಮವಾಗುವುದು. ಆದುದರಿಂದಲೇ ಕೃತಾದಿ ಯುಗಗಳಲ್ಲಿ ಹುಟ್ಟಿದ ಜ್ಞಾನಿಗಳು ಕಲಿಯುಗದಲ್ಲಿ ಹುಟ್ಟಲು ಆಶಿಸಿ, ಅಂತೆಯೇ ಈಗ ಅನೇಕ ಭಗವದ್ಭಕ್ತರಾಗಿ ಅವತರಿಸುವರು. ಅಲ್ಲದೆ ಸಂಘಶಕ್ತಿಗಿರುವ ಪ್ರಾಶಸ್ತ್ಯ ಇಮ್ಮಡಿಸುವುದು. ಈ ಯುಗದ ಕಡೆಯಲ್ಲಿ ಭಗವಂತ ಕಲ್ಕಿಯ ಅವತಾರವನ್ನು ಎತ್ತಿ ಅಧರ್ಮಿಗಳನ್ನು ನಿಶ್ಶೇಷವಾಗಿ ಸಂಹರಿಸಿ, ಉಳಿದ ಸತ್ಪುರುಷರ ಮನಸ್ಸಿನಲ್ಲಿ ಒಳ್ಳೆಯ ಗುಣಗಳುಂಟಾಗುವಂತೆ ಪ್ರೇರಿಸುವನು. ಆಗ ಮತ್ತೆ ಕೃತಯುಗ ಹುಟ್ಟುವುದು (ನೋಡಿ-ಯುಗಗಳು).	(ಎ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ